ಆಮ್ ಆದ್ಮಿ ಪಕ್ಷ (ಆಪ್)ಗೆ ಭಾರೀ ಶಾಕ್ ನೀಡುವ ಬೆಳವಣಿಗೆಯಲ್ಲಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಪಕ್ಷ ತೊರೆದಿದ್ದಾರೆ. ಇನ್ನೂ ದೊಡ್ಡ ಸಂಗತಿ ಎಂದರೆ, ರಾಜ್ಯಸಭೆಯ 7 ಆಪ್ ಸಂಸದರೊಂದಿಗೆ ಬಿಜೆಪಿ ಸೇರಲು ತೀರ್ಮಾನಿಸಿದ್ದಾಗಿ ಅವರು ಘೋಷಿಸಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಘವ್ ಚಡ್ಡಾ, “ಸೈದ್ಧಾಂತಿಕ ಭಿನ್ನಾಭಿಪ್ರಾಯ”ವೇ ತಮ್ಮ ನಿರ್ಧಾರದ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದರು. ಒಮ್ಮೆ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ಆತ್ಮೀಯನಾಗಿ ಗುರುತಿಸಿಕೊಂಡಿದ್ದ ಚಡ್ಡಾ, ಇದೀಗ ಪಕ್ಷದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
“ಜನಸಾಮಾನ್ಯರ ಧ್ವನಿಯಾಗಬೇಕು ಎಂಬ ಉದ್ದೇಶದಿಂದ ನಾನು ಆಪ್ ಸೇರಿದ್ದೆ. ಆದರೆ ಈಗ ಆ ಪಕ್ಷ ತನ್ನ ಮೂಲ ಗುರಿಗಳಿಂದ ದೂರವಾಗಿದೆ. ಸಿದ್ಧಾಂತವಿಲ್ಲದ ರಾಜಕೀಯದಲ್ಲಿ ನಾನು ಇರಲು ಸಾಧ್ಯವಿಲ್ಲ,” ಎಂದು ಅವರು ಖಡಕ್ ಆಗಿ ಹೇಳಿದರು.
ಕಳೆದ ಕೆಲವು ವಾರಗಳಿಂದಲೇ ರಾಘವ್ ಚಡ್ಡಾ ಮತ್ತು ಆಪ್ ನಡುವಿನ ಅಂತರ ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿತ್ತು. ರಾಜ್ಯಸಭೆ ಉಪನಾಯಕ ಸ್ಥಾನದಿಂದ ಅವರನ್ನು ವಜಾಗೊಳಿಸಿದ ಬಳಿಕ ಈ ಬೆಳವಣಿಗೆಗಳು ವೇಗ ಪಡೆದುಕೊಂಡವು.
ಇದರ ನಡುವೆ, ಭದ್ರತಾ ವ್ಯವಸ್ಥೆಯಲ್ಲೂ ಬದಲಾವಣೆ ಗಮನಸೆಳೆಯಿತು. ಪಂಜಾಬ್ ಸರ್ಕಾರ Z+ ಭದ್ರತೆಯನ್ನು ಹಿಂಪಡೆದ ಬಳಿಕ, ಕೇಂದ್ರ ಸರ್ಕಾರದಿಂದ Z ಶ್ರೇಣಿಯ ಭದ್ರತೆ ನೀಡಲಾಗಿತ್ತು.
ಇದೀಗ ರಾಘವ್ ಚಡ್ಡಾ ಬಹಿರಂಗವಾಗಿ ಘೋಷಿಸಿರುವಂತೆ, ರಾಜ್ಯಸಭೆಯ ಒಟ್ಟು 10 ಆಪ್ ಸಂಸದರ ಪೈಕಿ 7 ಮಂದಿ ಬಿಜೆಪಿ ಜೊತೆ ವಿಲೀನಗೊಳ್ಳಲಿದ್ದಾರೆ. ಈ ಸಂಬಂಧ ಅರ್ಜಿಯನ್ನು ರಾಜ್ಯಸಭೆ ಉಪಸಭಾಪತಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸೇರಲಿರುವ ಆಪ್ ಸಂಸದರು:
- ರಾಘವ್ ಚಡ್ಡಾ
- ಹರ್ಭಜನ್ ಸಿಂಗ್
- ಸ್ವಾತಿ ಮಲಿವಾಲ್
- ರಾಜಿಂದರ್ ಗುಪ್ತಾ
- ವಿಕ್ರಮ್ ಸಹ್ನಿ
- ಅಶೋಕ್ ಮಿತ್ತಲ್
- ಸಂದೀಪ್ ಪಾಠಕ್
ಒಟ್ಟಿನಲ್ಲಿ, ಈ ಬೆಳವಣಿಗೆ ರಾಷ್ಟ್ರೀಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಆಪ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಇದರ ರಾಜಕೀಯ ಪರಿಣಾಮ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.